ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Tuesday 12 May 2015

ಜನುಮ ದಿನದ ಹಾರ್ದಿಕ ಶುಭಾಶಯಗಳು… ತಮ್ಮಾ

ಅಂತರ್ಜಾಲದಲ್ಲಿ ಸಾಮಾಜಿಕ ಜಾಲತಾಣಗಳು ತನ್ನದೇ ಆದ ಕೊಡುಗೆ ನೀಡಿವೆ, ಇನ್ನೂ ನೀಡುತ್ತಲೇ ಇವೆ.... ಇಂತಹ ಜಾಲತಾಣ ನನಗೆ ಸಿಕ್ಕ ದೊಡ್ಡ ಕೊಡುಗೆ ನನ್ನ "ಸ್ನೇಹಲೋಕ"........

ಆದಿನಗಳಲ್ಲಿ ನಾನು ನಕಾರಾತ್ಮಕ ಆಲೋಚನೆಗಳಲ್ಲಿ ಮುಳುಗಿದ್ದ ಸಮಯದಲ್ಲಿ ನನ್ನೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಈ ಸ್ನೇಹಲೋಕ ಗೆಳಯರು ಎಂದರೆ ತಪ್ಪಾಗಲಾರದು......

ಸ್ನೇಹಲೋಕದ ಸ್ನೇಹಿತರಲ್ಲಿ ಪರಿಚಯವಾದ ಮೊದಲ ದಿನವೇ ಮನತುಂಬಿ ಅಣ್ಣಾ ಎಂದು ಕರೆದ ನನ್ನ ಪ್ರೀತಿಯ ತಮ್ಮ ಈ "ವಸಂತ  ಕುಮಾರ" ಕಂಠೀರವ" ..........

ನನ್ನ ಜೀವನದಲ್ಲಿ ನನಗಿಂತ ಕಿರಿಯರಿಗೂ ಗೌರವ ಕೊಟ್ಟು ಮಾತನಾಡುವುದನ್ನು ಕಲಿಸಿಕೊಟ್ಟವರು ನನ್ನ ತಾಯಿ, ಅವರ ಆಶಯದಂತೆಯೇ ಹಿರಿ-ಕಿರಿಯರೆಲ್ಲರನ್ನೂ ಪ್ರೀತಿಯಿಂದ ಕಾಣುವ ನನಗೆ ಇವನನ್ನು ಕಂಡರೆ ಪ್ರೀತಿ, ಗೌರವ, ಅಭಿಮಾನ ತುಸು ಹೆಚ್ಚೇ ಎಂದರೆ ತಪ್ಪಲ್ಲ.....

ಇವನನ್ನು ತಮ್ಮಾ ಎನ್ನಲೆ, ಗೆಳಯಾ ಎನ್ನಲೆ, ಬಂಧು ಎನ್ನಲೆ, ಎಲ್ಲವೂ ಒಟ್ಟುಗೂಡಿ ಬದುಕಿಗೆ ಉತ್ಸಾಹ ತುಂಬುವ ಗುರು ಎನ್ನಲೆ?

ಅಂತರ್ಜಾಲ ತಾಣ ಆರ್ಕುಟ್ ನಿಂದ ಪರಿಚಯವಾದ ಇವನ ಸ್ನೇಹ ಇಂದು ಒಡಹುಟ್ಟಿಗಿಂತಲೂ ಹೆಚ್ಚಾಗಿದೆ...........   

ಇಂತಹ ತಮ್ಮನಿಗೆ ಪ್ರೀತಿಯ ಜನುಮ ದಿನದ ಹಾರ್ದಿಕ ಶುಭಾಶಯಗಳು…….. ದೇವರು ಸದಾ ಕಾಲ ನಿನ್ನನ್ನು ಹರಸಲಿ ಎಂದು ಹಾರೈಸುವೆನು………

Tuesday 14 April 2015

ಹತ್ತು ಜನರಿಂದ ಒಂದೊಂದು ತುತ್ತು….. ಇದು ನನ್ನ ಬಾಲ್ಯದ ಕನಸು…...



ಅದು ಸಾವಿರದಾ ಒಂಬೈನೂರ ತೊಂಬತ್ತೆರಡನೆ ಇಸವಿ (1992) ಅಂದರೆ ಸರಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ! ನಾನಾಗ ನಾಲ್ಕನೇ ತರಗತಿ ಓದುತ್ತಿದ್ದೆ ಮನೆಯಿಂದ ಶಾಲೆಗೆ 5 ಕಿ ಮೀ ಪಯಣ, ಈಗಿನಂತೆ ಬಸ್ಸಿರಲಿಲ್ಲಾ, ಆಟೋ ಇರಲಿಲ್ಲ, ಆಟೋ ಇದ್ದರೂ ಬಡವರ ಕೈಗೆಟುಕುವಂತಿರಲಿಲ್ಲ ಹಾಗೂ ಇತರೆ ವಾಹನವಿಲ್ಲ. ನಡೆದುಕೊಂಡೇ ಶಾಲೆಗೆ ಹೋಗಬೇಕು,  ನಡೆದುಕೊಂಡೆ ಮನೆಗೆ ವಾಪಸ್ ಬರಬೇಕು. ಅದೂ ಬರಿಗಾಲಿನಲ್ಲಿ! ಬಿಸಿಲುಗಾಲದಲ್ಲಿ ಪ್ರತಿ ಹೆಜ್ಜೆ ಇಡಬೇಕಾದರೆ ಕಣ್ಣು ತುಂಬಿ ಬರುತ್ತಿತ್ತು….
ಆ ದಿನಗಳಲ್ಲಿ ಒಂದು ದಿನ ಎಂದಿನ ಶನಿವಾರದಂತೆ ಅರ್ಧ ದಿನದ ತರಗತಿ ಮುಗಿಸಿಕೊಂಡು ಬಿರು ಬಿಸಿಲಿನಲ್ಲಿ ನಡೆದು ಸಾಗುವಾಗ ಅರ್ಧ ದಾರಿ ಕ್ರಮಿಸಲಷ್ಟೇ ಸಾಧ್ಯವಾದದ್ದು, ಕಾಲುಗಳು ಸುಟ್ಟು ಹೆಜ್ಜೆ ಇಡಲಾಗದೆ ಕ್ಷಣ ಕ್ಷಣಕ್ಕೂ ನರಕ ಯಾತನೆಯ ಅನುಭವಿಸಿದಂತಾಗುತಿತ್ತು ಹಾಗೂ ಹೀಗೂ ಮಾಡಿ ಮನೆ ಸೇರಿದ್ದು ಆಯಿತು……
ಆ ದಿನ ಹೆಜ್ಜೆ ಇಡಲಾಗದೆ ಸುಸ್ತಾಗಿ ಕುಳಿತಾಗ ಗಟ್ಟಿಯಾಗಿ ಮಾಡಿದ ಒಂದು ನಿರ್ಧಾರ ಅಂದರೆ ಸಾಧ್ಯವಾದರೆ ಮುಂದೊಂದು ದಿನ ನಾನು ದೊಡ್ಡವನಾದ ಮೇಲೆ ನನ್ನಂತೆ ಬರಿಗಾಲಲ್ಲಿ ನಡೆವ ಒಂದು ಮಗುವಿಗಾದರೂ ಚಪ್ಪಲಿ ಕೊಡಿಸಬೇಕು……….. ಅಲ್ಲಿಂದ ಅದು ಪ್ರತಿ ನಿತ್ಯದ ಕನಸೇ ಆಗಿ ಹೋಯಿತು ಆ ಕನಸಲ್ಲಿ ನನ್ನ ನೋವು ಮರೆತೇ ಹೋಗಿತ್ತು………..!!
ಬರೀ ಪಾದರಕ್ಷೆಯ ಸಮಸ್ಯೆ ಮಾತ್ರವಲ್ಲ ನಮ್ಮ ಬದುಕು ಅದನ್ನೂ ಮೀರಿದ ಹತ್ತು ಹಲವು ನೋವುಗಳಿದ್ದವು ಅವುಗಳಲ್ಲಿ ಕೆಲವು ಇಂದಿಗೂ ಮನದಲ್ಲಿ ಜೀವಂತ, ಇತರ ನಮಗಿಂತ ಸಿರಿವಂತರ ಮಕ್ಕಳು ಓದಿ ಬರೆದು ಮುಗಿಸಿದ ಪುಸ್ತಕದಲ್ಲಿ ಉಳಿದ ಹಾಳೆಗಳನ್ನು ಪಡೆದು ಅದನ್ನು ಒಟ್ಟುಗೂಡಿಸಿ ಅದಕ್ಕೆ ದಾರದಿಂದ ಹೊಲಿಗೆ ಹಾಕಿ ಪುಸ್ತಕದ ರೀತಿ ಮಾಡಿ ನೋಟ್ಸ್‌ಗಳನ್ನು ಪೂರ್ಣಗೊಳಿಸಿದ ಹತ್ತಾರು ಉದಾಹರಣೆಗಳು ಮನದಲ್ಲಿ ಹಚ್ಚ ಹಸಿರಾಗಿದ್ದು, ಇಂದಿಗೂ ಕಣ್ಣಲ್ಲಿ ನೀರು ತರಿಸುತ್ತವೆ.
ಹರಿದ ಅಂಗಿಯ ಉಟ್ಟು, ಕೊಳಕು ಚಡ್ಡಿಯ ತೊಟ್ಟು, ದಾರಿಯಲಿ ನಡೆವಾಗ ಹಣವಂತರ ಮಕ್ಕಳು ಅಣಕಿಸಿದ್ದು ಇನ್ನೂ ಹಸಿ ಹಸಿಯಾಗಿಯೇ ನೆನಪಿದೆ.
ಇದೆಲ್ಲಾ ನನ್ನ ಬದುಕಿನ ಪುಟಗಳಲಿ ಅಚ್ಚಳಿಯದೆ ಉಳಿದ ನೆನಪುಗಳ ಕಲಾಕೃತಿಗಳು ಅಂದರೂ ತಪ್ಪಲ್ಲ.......
...............................................................

ಈಗ ಕಾಲ ಬದಲಾಗಿದೆಮಕ್ಕಳು ಶಾಲೆಗೆ ಹೋಗಲು ಬೇಕಾದಷ್ಟು ಬಸ್ಸುಗಳಿವೆಅದೇ ಶಾಲೆಗಳ ವಾಹನಗಳೂ ಇವೆಆಟೋ ಇದೆ,ಮನೆ ಮನೆಗಳಲ್ಲೂ ಬೈಕುಕಾರುಗಳಿವೆ…. ಆದರೂ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ಮಕ್ಕಳು ಸೌಲಭ್ಯ ವಂಚಿತರಾಗಿಯೇ ಇದ್ದಾರೆ.  ಅಂತಹ ಲಕ್ಷಾಂತರ ಮಕ್ಕಳಲ್ಲಿ ಹತ್ತಾರು ಮಕ್ಕಳಿಗಾದರೂ ನಮ್ಮ ಕೈಲಾದ ಸಹಾಯ ಮಾಡಬೇಕು ಅನ್ನುವ ಆಶಯದಿಂದ ರೂಪ ತಳೆದ ತಂಡವೇ ಹತ್ತು ಜನರಿಂದ ಒಂದೊಂದು ತುತ್ತು…..!
ಹತ್ತು ಜನರಿಂದ ಒಂದು ತುತ್ತು….. ಈ ಪರಿಕಲ್ಪನೆ ಹುಟ್ಟಿಕೊಂಡದ್ದೇ ವಿಸ್ಮಯ.....
ಉಳ್ಳವರಿಂದ ಪಡೆದು ಇಲ್ಲದವರಿಗೆ ಕೊಡಬೇಕು” ಸಮಾಜಕ್ಕೆ ನಮ್ಮದೇ ಏನಾದರೂ ಕೊಡುಗೆ ಕೊಡಬೇಕು ಎಂಬ ಆಶಯ ಚಿಕ್ಕ ವಯಸಿನ ಮನಸಲ್ಲಿ ಇದ್ದ ದೊಡ್ಡ ಆಸೆಗೆ ಕಾಲ ಕೂಡಿ ಬಂದಿತು. 
ಆ ಕನಸುಗಳು ಕೈಗೂಡಲು ತೆಗೆದುಕೊಂಡ ಕಾಲ ಇಪ್ಪತ್ತು ವರ್ಷಗಳು.!
ನನ್ನ ಕಣ್ಣ ಸಣ್ಣ ಕನಸ ನನಸು ಮಾಡಲು ನಾ ಆಯ್ಕೆ ಮಾಡಿಕೊಂಡ ಸ್ಥಳವೇ ಸಾಮಾಜಿಕ ತಾಣಗಳು...... ಈ ಸಾಮಾಜಿಕ ತಾಣಗಳಿಂದಾಗಿ ನೂರಾರು ಸ್ನೇಹಿತರು ಸಿಕ್ಕಿ ನನ್ನ ಕನಸನ್ನು ನನಸು ಮಾಡಲು ಸಹಾಯ ಹಸ್ತ ಚಾಚಿದರು ಆ ಎಲ್ಲರಿಗೂ ನಾ ಚಿರಋಣಿ.... 
ಆದರೆ ಅಂದು ಅಂದುಕೊಂಡದ್ದನ್ನು ನೂರು ರೂಪಾಯಿಯಲ್ಲಿ ೧ ಪೈಸದಷ್ಟಾದರೂ ಸಾಧಿಸಿದ್ದೇನೆ ಅನ್ನೋ ಆತ್ಮ ತೃಪ್ತಿ ನನ್ನ ಮನಸಲ್ಲಿದೆ..... 

ಆದರೆ ಸಾಗಬೇಕಾದ ದಾರಿ ಸಾವಿರ ಮೈಲಿಗಿಂತ ದೊಡ್ಡದಿದೆ ..........

Wednesday 11 February 2015

ನಾ ನಾ ಎಂಬುದು ನಾನಲ್ಲ

ನಾನು ನಾನೆನ್ನುವ ನಾನು.... ನಾನಾರು ಎಂಬುದ ತಿಳಿಯಲು ಈ ಹಾಡು ಕೇಳೋಣ


ನಾ ನಾ ಎಂಬುದು ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನರದೇಹವಿದು ನಾನಲ್ಲ
ಜರ ಮರಣಾದಿಯು ನಾನಲ್ಲ ... ೨
ವರ ವೈಭವ ಸಂಸಾರದ
ಸವಿ ಸುಖ ಮರನಾಯಕ ನಾನಲ್ಲ
ಮಾತ ಪಿತ ಸುತ ನಾನಲ್ಲ
ಗುರುನಾಥನಾದವ ನಾನಲ್ಲ ... ೨
ಜಾತಿ ಗೋತ್ರಗಳು ನಾನಲ್ಲ
ಬಹು ಪ್ರೀತಿಯ ಸತಿ ಸುತ ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾನಾ ರೂಪವು ನಾನಲ್ಲ
ನಾ ಶಿಷುನಾಳಧೀಶನ ಬಿಡಲಿಲ್ಲ ... ೨
ನಾ ಅಳಿಯದೆ ನಾ ತಿಳಿಯಲಾರದು
ನಾ ಅಳಿಯದೆ ನಾ ತಿಳಿಯಲಾರದು
ನೀ ಎಣಿಸುವ ಗುಣ ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ.............

Monday 25 August 2014

ಮೂಕ ಸಂವೇದನೆ.....

ನಾ ಕಂಡ ಮುಗ್ಧ ಮನಸಿನ ಗೆಳತಿಯ ಅಂತರಂಗದ ಮೂಕ ಸಂವೇದನೆಯ  ಗ್ರಹಿಕೆಯ ಅನಾವರಣ ಇಲ್ಲಿದೆ..... ತೋಚಿದಂತೆ ಗೀಚಿರುವೆ  ತಪ್ಪು ಒಪ್ಪುಗಳನ್ನು ತಿದ್ದಿ ಓದಿಕೊಳ್ಳಿ.... - ಸ. ಬಿ. ಕ

ಚಿತ್ರ : ಅಂತರ್ಜಾಲ ಕೃಪೆ 

ಅಪ್ಪಾ ನನ್ ಜೀವನದಲ್ಲಿ ಹುಟ್ಟಿನಿಂದ ಇಲ್ಲೀವರೆಗೊ ನೀವು  ಹಾಕಿದ ಒಂದು ಗೆರೆಯನ್ನೂ ದಾಟಿದವಳಲ್ಲ ನಾನು.......

ಇಷ್ಟು ದಿನ ನಿಮ್ಮ ಮೇಲಿದ್ದ ಅಭಿಮಾನದ ಆಶಾ ಗೋಪುರ ಕಳಚಿ ನಾ ನಿಂತ ಜಾಗದಲ್ಲೇ ಕುಸಿದು ಪಾತಾಳಕ್ಕೆ ಮುಳುಗಿದಂತೆ ಆಯಿತು...... ಇಪ್ಪತ್ತು ವರ್ಷಗಳಿಂದ ನಾನು ನನ್ನೊಳಗೆ ಬೆಳೆಸಿಕೊಂಡು ಬಂದಿದ್ದ ಭಾವನೆಗಳನ್ನು ಈ ಇಪ್ಪತ್ತು ದಿನಗಳಲ್ಲಿ ಅದರಲ್ಲೂ ಕೊನೆಯ ಈ ಇಪ್ಪತ್ತು ನಿಮಿಷಗಳಲ್ಲಿ ನುಚ್ಚು ನೂರು ಮಾಡಿಬಿಟ್ಟಿರಿ......

ನಿಜ ಅಪ್ಪಾ ನಾನು ಭಾವಿಯೊಳಗಿನ ಕಪ್ಪೆ, ನನಗೆ ಈ ಜಗತ್ತಿನ ಅರಿವಿಲ್ಲ ನಿಜ ಆದರೆ ಈ ಭಾವಿಯೊಳಗಿಂದ ಆಚೆ ಕಣ್ಣು ಹಾಯಿಸಲು ಸ್ವತಂತ್ರ ನೀಡದೇ ಇದ್ದವರೊ ನೀವೇ ನೆನಪಿರಲಿ..... ಇಂದು ನಿನಗೆ ಯಾವುದರಲ್ಲ್ಲೂ ಯೋಗ್ಯತೆ ಇಲ್ಲ ಎಂದು ಹೇಳುತ್ತಿರುವವರೂ ನೀವೇ...

ಉನ್ನತ ವಿದ್ಯಾಭ್ಯಾಸ ಮಾಡಿ ನನ್ನ ಕಾಲ ಮೇಲೆ ನಾನು ನಿಂತು ಬದುಕನ್ನು ಮುನ್ನಡೆಸುವುದನ್ನು ಕಲಿತು ನಂತರ ಮುಂದಿನ ವೈವಾಹಿಕ ಜೀವನದ ಬಗ್ಗೆ ಯೋಚಿಸಬೇಕು ಅಂದುಕೊಂಡಿದ್ದವಳಿಗೆ ಪದವಿ ಪರೀಕ್ಷೆ ಬರೆಯುವ ಸಮಯದಲ್ಲೇ ಮದುವೆ ನಿಶ್ಚಯ ಮಾಡಿದಿರಿ  ಮತ್ತು ಫಲಿತಾಂಶ ಬರುವ ಮುನ್ನವೇ ವಿವಾಹ ಮಾಡಿದಿರಿ... 

ಅದೂ ಅಜಗಜಾಂತರ ವಯಸ್ಸಿನ ವ್ಯತ್ಯಾಸದ ಹುಡುಗನನ್ನು ಆಯ್ಕೆ ಮಾಡಿದ್ದೂ ಅಲ್ಲದೆ ಇನ್ನೊಬ್ಬರ ಮುಂದೆ ಹುಡುಗನ ಕೆಲಸ, ಸಂಬಳ ನೋಡಿ ಮದುವೆ ಮಾಡುತಿಲ್ಲ ಹುಡುಗನಿಗೆ ಸ್ವಂತ ಮನೆ ಇದೆ, ಅನ್ನೋ ಒಂದೇ ಕಾರಣ ಹೇಳುತ್ತಿದ್ದೀರಿ.......... ಅಂತಹ  ತಪ್ಪು ನಾನೇನು ಮಾಡಿದೆ?

ಬೇರೆ ಹೆಣ್ಣು ಮಕ್ಕಳಂತೆ ಹಾದಿ ತಪ್ಪಿದ್ದೆನಾ? ಯಾವುದಾದರೂ ಪ್ರೇಮ ಪಾಶದಲ್ಲಿ ಮುಳುಗಿದ್ದೆನಾ? ಇಲ್ಲ ಅನಾಚಾರದ ಮೋಹಕ್ಕೆ ಒಳಗಾಗಿದ್ದೆನಾ? ಖಂಡಿತಾ ಇಲ್ಲ ಅಪ್ಪಾ ನಮ್ಮ ಸಂಸ್ಕೃತಿಯ ಅವಮಾನಿಸುವಂತಹ ಹಾಗೂ ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ..... ಆದರೂ ನಿಮ್ಮ ದೃಷ್ಟಿಯಲ್ಲಿ ನಾ ಹೇಗೆ ಕಾಣುತ್ತಿರುವೆನೋ ನನಗೆ ಗೊತ್ತಿಲ್ಲ...

ಈಗ ಅನಿಸುತಿದೆ ಅಪ್ಪಾ ಎಲ್ಲರಂತೆ ನಾನೂ ಕೂಡಾ ಇರಬೇಕಿತ್ತು ಅಂತಾ... ನಾನು ಸಾಮಾನ್ಯ ಬದುಕನ್ನು ಪ್ರೀತಿಸಿದವಳು ಆಡಂಬರದ ಬದುಕನ್ನು ಎಂದೂ ಬಯಸಲಿಲ್ಲ....

ಇಂದಿನವರೆಗೂ ನನಗೆ ಅವಶ್ಯಕವಿರುವ ಎಲ್ಲಾ ವಸ್ತುಗಳ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೆ, ಯಾಕೆಂದರೆ ನನಗೆ ಆಯ್ಕೆ ಮಾಡಲು ಬಾರದು ನಾನೊಬ್ಬಳು ದಡ್ಡಿ ಎಂದು ಪ್ರತೀ ಬಾರಿ ನೀವೇ ಹೀಯ್ಯಾಳಿಸುತ್ತಿದ್ದಿರಿ  .....  ನೀವು ಆಯ್ಕೆ ಮಾಡಿದ ಯಾವುದನ್ನೂ ತಿರಸ್ಕರಿಸಿರಲಿಲ್ಲ..... ಕಾರಣ ನಿಮ್ಮ ಮೇಲಿನ ಗೌರವ ಮತ್ತು ಪ್ರೀತಿ  ಹಾಗೆಯೇ ಈ ಮದುವೆಯನ್ನು ಕೂಡಾ ನಾನು ತಿರಸ್ಕರಿಸುತ್ತಿಲ್ಲ.... ನೂರಕ್ಕೆ ನೂರಾ ಒಂದರಷ್ಟು ಇಷ್ಟವಿಲ್ಲದಿದ್ದರೂ .....  

ಹೊರ ಜಗತ್ತಿನ ಅರಿವೇ ಇಲ್ಲದ ನನ್ನನ್ನು ಗುರುತು ಪರಿಚಯ ಇಲ್ಲದ ದೂರದ ಊರಿಗೆ ಕೊಟ್ಟು ಮದುವೆ ಮಾಡಿ ನಿಮ್ಮ ಜವಾಬ್ದಾರಿ ಕಳೆದು ಕೈ ತೊಳೆದುಕೊಳ್ಳಬೇಕು ಎಂಬುದಷ್ಟೇ ನಿಮ್ಮ ಜೀವನದ ಗುರಿ ಅಂತ ನೀವು ಬಿಡಿಸಿ ಹೇಳಿದಾಗಲೇ ನಿಮ್ಮ ನಿಜವಾದ ಭಾವನೆಗಳು ಅರ್ಥವಾದಾದದ್ದು.......

ಇರಲಿ ಬಿಡಿ ಎಲ್ಲಾ ನನ್ನ ಹಣೆಯ ಬರಹ....... ದೈವ ಚಿತ್ತ..... ಅವನ ನಿಯಮ ಮೀರಿ ಇಲ್ಲಿ ಹುಲ್ಲುಕಡ್ಡಿಯೂ ಅಲುಗದು ಅವ ನಡೆಸಿದಂತೆ ನಡೆವೆ.......

ಅಪ್ಪಾ ನೀವು ಮಾಡಿದ ತಪ್ಪಿಗಾಗಿ ಕೊರಗುತ್ತಾ ಕೂರುವುದಿಲ್ಲ  ನಿಮ್ಮ ಮೇಲಿನ ಕೋಪಕ್ಕೆ ನನ್ನನ್ನು ಮದುವೆಯಾದ ಹುಡುಗನ ಕನಸುಗಳನ್ನು ನಾ ಹಾಳು ಮಾಡಲು ಇಷ್ಟ ಪಡುವುದಿಲ್ಲ ತುಂಬಾ ಪ್ರೀತಿ ಮಮಕಾರಗಳಿಂದ  ಬದುಕನ್ನು ಮುನ್ನಡೆಸುತ್ತೇನೆ...........

ಕೊನೆಗೆ ಒಂದು ಮಾತು :-  ಅಪ್ಪಾ ಇನ್ನು ಮುಂದೆ ನಾ ನಿಮ್ಮ ಪಾಲಿಗೆ ಬದುಕಿದ್ದೂ ಸತ್ತಂತೆ......... 

Sunday 1 June 2014

ಕಾಲ ಚಕ್ರದ ಜಾಲದಲ್ಲಿ.....

ನಾನು ನನ್ನ ಶತ್ರುವನ್ನೂ ನೋಯಿಸಲು ಇಷ್ಟಪಡುವುದಿಲ್ಲ ಎಂದವನೊಬ್ಬ ಹಿಂದೊಮ್ಮೆ ಬದುಕಿಗೆ ಬೆಳಕಾದ ಸ್ನೇಹಿತನನ್ನೇ  ವ್ಯಂಗ್ಯ ಮಾತಿನ ಮೂಲಕ ಚುಚ್ಚಿ ಹಿಂಸಿಸತೊಡಗಿದ....... ಇದೇ ಇರಬೇಕು ಕಾಲಚಕ್ರದ ಮಹಿಮೆ.......

ಕಷ್ಟದಲ್ಲಿ ಕಣ್ಣೀರಿಡುತ್ತಿದ್ದಾಗ ಕಣ್ಣೀರ ಒರೆಸಿ..... ನಿನ್ನ ಭಾರಗಳಿಗೆ ಹೆಗಲು ನೀಡಿ ಪಾಲು ಪಡೆದು ನೋವ ನಿವಾರಿಸಿದ... ನಿನ್ನ ಬದುಕಿಗೆ ನೆರಳಾಗಿ ನಿಂತದ್ದಕ್ಕೆ ನೀ ಕೊಟ್ಟ ಉಡುಗೊರೆ ಕಣ್ಣೀರು.... ಯಾರದೋ ತಪ್ಪು ಶಿಕ್ಷೆ ಮಾತ್ರ ನಿರಪರಾಧಿಗೆ.....

ನನಗೆ ಗೊತ್ತು ಸರಿ ತಪ್ಪುಗಳನ್ನು ಪರಾಮರ್ಶಿಸುವ ಮನಸ್ಥಿತಿ ನಿನ್ನಲ್ಲಿ ಇಲ್ಲ ಎಂದು..... ನಾನು ಮಾಡಿದ್ದೇ ಸರಿ ಎಂದು ವಾದಿಸುವ ಅಹಂ ಕೂಡಾ ಹೆಚ್ಚಾಗಿದೆ ಎಂಬುದು, ನಿನ್ನಲ್ಲಿನ ಮಾನವೀಯತೆಯ ಗುಣಗಳು ಬರೀ ತೋರ್ಪಡಿಕೆ ಮಾತ್ರ ಸೀಮಿತವೆಂಬುದು ಈಗ ನನಗೆ ಮನದಟ್ಟಾಗಿದೆ....
ಒಂದು ಮಾತು ನೆನಪಿಟ್ಟುಕೋ ಗೆಳಯ ಬಣ್ಣದ ಮಾತುಗಳಿಗೆ ಮನ್ನಣೆ ಎಂಬುದು ನಿನ್ನ ಪಾಲಿಗೆ ಸಿಹಿ ಆಗಿರಬಹುದು ಆದರೆ ಮುಂದೊಮ್ಮೆ ನಿನಗೇ ಅರ್ಥವಾಗುತ್ತದೆ ಗಾಜಿನ ರಾಮನೆಯಲ್ಲಿ ಕುಳಿತು ಎದುರು ಮನೆಯ ಕಿಟಕಿಗೆ ಕಲ್ಲು ಬೀಸುವ ಮುನ್ನ ಯೋಚಿಸು......
ಅಂತಿಮವಾಗಿ ಒಂದು ಮಾತು... ನಿನ್ನ ಸ್ವಾರ್ಥಕ್ಕಾಗಿ ನೀ ಯಾವ ಕ್ಷಣದಲ್ಲಾದರೂ ಬದಲಾಗಿಬಿಡುವೆ ಎಂಬ ಸತ್ಯವನ್ನು ಮನದಟ್ಟು ಮಾಡಿದ್ದಕ್ಕೆ ಧನ್ಯವಾದಗಳು...... 

Saturday 1 March 2014

ಜನುಮ ದಿನದ ಹಾರ್ದಿಕ ಶುಭಾಶಯಗಳು ಶ್ರೀಕಾಂತಣ್ಣ..........

ಒಂದು ದಿನ ದೇವಲೋಕದ ದೇವಾನು ದೇವತೆಗಳೆಲ್ಲಾ ಸಭೆ ಸೇರಿದ್ದರು...... ಚರ್ಚೆ ನಡೆಯುತ್ತಿತ್ತು..... ಚರ್ಚೆಯ ವಿವರ ಹೀಗಿತ್ತು...

ನಾವು ದೇವರುಗಳು ಅಂದರೆ ಭೂಲೋಕವನ್ನು ಸೃಷ್ಟಿಸಿದ್ದು ನಾವು, ಭೂಮಿಯನ್ನು ಬುಗುರಿಯಂತೆ ತಿರುಗಿಸುತ್ತಿರುವವರು..... 

ಭೂಮಿಯಲ್ಲಿನ ಪ್ರತಿಯೊಬ್ಬರ ಆಗು ಹೋಗುಗಳನ್ನು ಕಷ್ಟ ಸುಖಗಳನ್ನು, ನಗು ಅಳುಗಳನ್ನು ನಾವಿಲ್ಲಿ ಕಣ್ಣು ಹಾಯಿಸಿಯೇ ತಿಳಿದು ಕೊಳ್ಳುವಂತಹ ದಿವ್ಯ ಶಕ್ತಿ ಉಳ್ಳವರು.... ಅವುಗಳನ್ನು ಮೊದಲೆ ಗ್ರಹಿಸುವವರೂ ಕೂಡಾ ನಾವೇ ! ಎಲ್ಲಕ್ಕಿಂತ ಮಿಗಿಲಾಗಿ ಅದನ್ನು ನಿರ್ಧರಿಸುವವರೂ ನಾವೇ....! ನಾವೇ ಸರ್ವಶಕ್ತರು.... 

ಅಷ್ಟರಲ್ಲಿ ಲೋಕ ಸಂಚಾರಿ ನಾರದರು ಬಂದರು ಇವರ ಚರ್ಚೆಯ ಮಧ್ಯೆ ಮೂಗು ತೂರಿಸಿ ನಿಮ್ಮಂತೆಯೇ ಭೂಲೋಕದಲ್ಲೂ ಒಬ್ಬರು ನಮ್ಮ ದೇವಲೋಕದ ಆಗು ಹೋಗುಗಳ ಬಗ್ಗೆ ತಿಳಿದಿಕೊಂಡಿರುವವರು ಇದ್ದಾರೆ ಎಂದರು!

ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು

ಅದಾರು ಅವನಾರು ನಾವಿಲ್ಲಿ ನಡೆಸುವ ಮಾತು ಕಥೆಗಳನ್ನು, ಚರ್ಚೆ, ಏಕಾಂತ ಸಂಭಾಷಣೆಗಳನ್ನು ಕುಳಿತಲ್ಲೇ ಕಲ್ಪನೆ ಮಾಡಿ ಬರೆವವವರು?

ನಾರದರು ಮುಂದುವರೆಸಿದರು ಬರೆಯುವುದು ಅಷ್ಟೆ ಅಲ್ಲಾ, ಕೆಲವು ದೇವರುಗಳಿಗೆ ಭೂಲೋಕದ ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ರುಚಿಯನ್ನೂ ಹತ್ತಿಸಿ ಬಿಟ್ಟಿದ್ದಾರೆ........ ದೇವಾನು ದೇವತೆಗಳೆಲ್ಲಾ ಮುಖ ಮುಖ ನೋಡಿಕೊಂಡರು!

ಹೌದು ಅಂತಹ ಒಬ್ಬರು ವ್ಯಕ್ತಿ ಇದ್ದಾರೆ ನಿಮಗೆ ಅವರನ್ನು ನೋಡುವ ಕುತೂಹಲವೇ? ಇಲ್ಲಿ ಬನ್ನಿ ಎಲ್ಲರೂ ಸುತ್ತಲೂ ನಿಲ್ಲಿ ಆಗೋ ಅಲ್ಲಿ ನೋಡಿ ಭೂ ಭಾಗದಲ್ಲಿ ಭಾರತ, ಅದರೊಳಗೆ ಕರುನಾಡು, ಅದರೊಳು ಬೆಂದಕಾಳೂರು,  ಬೆಂದಕಾಳೂರಿನ ಹೃದಯ ಭಾಗದಲ್ಲಿ ಕೈಯಲ್ಲಿ ಒಂದು ಕ್ಯಾಮರ ಹಿಡಿದು ಹಸನ್ಮುಖಿಯಾಗಿ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರಲ್ಲಾ ಅವರೇ!!

ಎಲ್ಲಾ ದೇವತೆಗಳೂ ಒಕ್ಕೂರಲಿನಿಂದ ಇವರು ನಮ್ಮ ಶ್ರೀಕಾಂತು (Srikanth Manjunath) ಎಂದು ಉದ್ಘರಿಸಿದರು!

ನಾರದರು ಮುಂದುವರೆದು ಹೌದು ಇವರು ನಿಮ್ಮ ಪ್ರೀತಿಯ ಶ್ರೀಕಾಂತೂ ನಿಜ, ಜೊತೆಗೆ ಸರಸ್ವತಿಯ ಪ್ರೀತಿಯ ದತ್ತುಪುತ್ರ ಹಾಗಾಗಿ ಅಭಿಮಾನದಿಂದ ಕೆಲವು ದೇವತೆಗಳು ಆಗಾಗ ಅವರ ಬ್ಲಾಗಿನ ಒಳಗೆ ಹೋಗಿ ಪಾತ್ರವಾಗಿ ಇರುತ್ತಾರೆ ಎಂದರು

ಇಂದು ಅವರ ಜನುಮ ದಿನ ಹೇಗೂ ಎಲ್ಲಾ ದೇವತೆಗಳೂ ಸೇರಿದ್ದೀರಿ ಹರಸಿ ಹಾರೈಸಿ ಎಂದಾಗ ಎಲ್ಲಾ ದೇವತೆಗಳೂ "ಶತಮಾನಂ ಭವತಿ ಶತಾಯುಹ್"   ಎಂದು ಹಾರೈಸಿದರು ಎಂಬಲ್ಲಿಗೆ ಈ ಬರಹಕ್ಕೆ ಮಂಗಳ ಹಾಡಲಾಯಿತು.

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

ಜನುಮ ದಿನದ ಹಾರ್ದಿಕ ಶುಭಾಶಯಗಳು ಶ್ರೀಕಾಂತಣ್ಣ

Wednesday 5 February 2014

ವಿಧಿಯೇ ನಿನಗೆ ಧಿಕ್ಕಾರ …

ಅದೊಂದು ಪುಟ್ಟ ಕುಟುಂಬ ಗಂಡ ಹೆಂಡತಿ ಇಬ್ಬರು ಮಕ್ಕಳು.... ಅಪ್ಪ ಒಂದು ಹೋಟೆಲ್ ನ ಕೆಲಸಗಾರರಾಗಿದ್ದರು, ಅಮ್ಮ ಗೃಹಿಣಿ…ಮಕ್ಕಳಲ್ಲಿ ಮಗ ದೊಡ್ಡವನು ಎರಡನೇ ತರಗತಿ, ಮಗಳು ಯೂ ಕೆ ಜಿ........

ಕಷ್ಟ ಎಷ್ಟೇ ಇದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ಹಗಲು ರಾತ್ರಿ ದುಡಿಯುತ್ತಿದ್ದ ಅಪ್ಪ,  ದಿನವೂ ಮಕ್ಕಳಿಗೆ ಅಕ್ಷರಗಳನ್ನು ತಿದ್ದಿ ಹೇಳಿಕೊಡುತ್ತಿದ್ದ ಅಮ್ಮ....... ಹೀಗೆ ಚಿಕ್ಕ ಸಂಸಾರ ಸುಖೀ ಸಂಸಾರ ಸುಗಮವಾಗಿ ಸಾಗುತ್ತಿತ್ತು......

ಇಂತಹ ಕುಟುಂಬಕ್ಕೆ 2014ರ ಹೊಸ ವರ್ಷ ಸಂಭ್ರಮ ತರುತ್ತದೆ  ಎಂದೇ ಭಾವಿಸಿ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಹಬ್ಬಕೆ ಎಳ್ಳು ಬೆಲ್ಲವ ಬೀರಿ ನೆರೆ ಹೊರೆಯವರಿಗೆ ಹಂಚಿ ಸಂಭ್ರಮಿಸಿದ್ದರು, ಮರು ದಿನ ಬಂಧು ಬಳಗದವರಿಗೆ ಹಂಚಲು ಎಲ್ಲವ ಸಿದ್ಧತೆ ಮಾಡಿಕೊಂಡಿದ್ದರು. 

ಮಕ್ಕಳಿಬ್ಬರನ್ನು  ಶಾಲೆಗೆ ಬಿಟ್ಟು ಅಲ್ಲಿಂದಲೇ ತಮ್ಮ ಸಹೋದರ ಸಂಬಂಧಿ ಊರಿಗೆ ಹೊರಟರುತನ್ನೂರಿನಿಂದ 30-35 ಕಿಲೋ ಮೀಟರ್ ದೂರದ ಒಂದು ಗ್ರಾಮಕ್ಕೆ ಹೋಗಿ ಸಭ್ರಮದಿಂದಲೇ ಎಳ್ಳು ಬೆಲ್ಲ ಕೊಟ್ಟು ಸಂಕ್ರಾಂತಿಯ ಶುಭ ಕೋರಿ ಎಲ್ಲರೊಡನೆ ಕಾಲ ಕಳೆದು ಊಟ ಮುಗಿಸಿ  ಮರಳಿ ಹೊರಟರು …….

ಹೊರಟ ಹತ್ತು ಹದಿನೈದು ನಿಮಿಷದಲ್ಲೇ ಬರಸಿಡಿಲಿನಂತೆ  ಬಂದು ಡಿಕ್ಕಿ ಹೊಡೆದಿತ್ತು ಯಮ ಸ್ವರೂಪಿ ಲಾರಿ ……….   ಅಪಘಾತದ ರಭಸಕ್ಕೆ ಪತಿ ಸ್ಥಳದಲ್ಲೇ ಮೃತ ಪಟ್ಟಿದ್ದರು …..  :(  ಆಂಬ್ಯುಲೆನ್ಸ್ ಸಹಾಯ ದಿಂದ  ಪತ್ನಿಯನ್ನು  ಆಸ್ಪತ್ರೆಗೆ ದಾಖಲಿಸಲಾಯಿತು  ಸ್ಥಿತಿ ಚಿಂತಾಜನಕವಾಗಿತ್ತು ………… L

ಮರುದಿನ ಪತ್ನಿಗೆ ಪ್ರಜ್ಞೆ ಬಂದಿತ್ತು ಆದರೆ ಆಘಾತವಾಗಬಹುದು ಎಂಬ ಕಾರಣದಿಂದ ಪತಿಯ ಮರಣದ ಸುದ್ದಿ ಹೇಳದೆ ಅಂತ್ಯಕ್ರಿಯೆ ನಡೆಸಲಾಯಿತು ……. ಆಕೆಯ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿತ್ತು  ಆದರೆ ಸುಧಾರಣೆಯಾಗುವುದೆಂಬ ಭರವಸೆ ಸಿಕ್ಕಿತ್ತು …….. ಆದರೆ ಮೂರು ದಿನಗಳ ನಂತರ  ಇಬ್ಬರೂ ಮಕ್ಕಳನ್ನು ಅನಾಥರಾಗಿಸಿ ಅವರೂ ಇಹ ಲೋಕ ತ್ಯಜಿಸಿದರು ……….

ಈಗ ಆ ಇಬ್ಬರು ಮಕ್ಕಳ ಸ್ಥಿತಿ ನೆನೆದು ಮನಸು ಭಾರವಾಗಿದೆ, ಇಬ್ಬರೂ ನಾನು ಕೆಲಸ ಮಾಡುತ್ತಿರುವ ಶಾಲೆಯ ವಿದ್ಯಾರ್ಥಿಗಳೇ ……. ಇನ್ನೂ ಪುಟಾಣಿ ಕಂದಮ್ಮಗಳು

ಓ ವಿಧಿಯೇ ನಿನಗೆ ಕರುಣೆಯೇ ಇಲ್ಲವ ? ಲೋಕ ಜ್ಞಾನವೇ ಅರಿಯದ ಮಕ್ಕಳನ್ನು ಹೆತ್ತವರಿಂದ ದೂರ ಮಾಡಿ ವಿಕಟ ಸಂತಸ ಪಡುವ ನಿನ್ನ ಬುದ್ಧಿಗೆ ಧಿಕ್ಕಾರವಿರಲಿ ………..